ಗಾಳಿಪಟ 2 ಚಿತ್ರದ ಮೂಲಕ ಯೋಗರಾಜ್ ಭಟ್ ಅವರು ಮತ್ತೆ ಸುದ್ದಿ ಆಗಿದ್ದಾರೆ. ಎರಡನೇ ಭಾಗದಲ್ಲಿ ಹಳೆಯ ಗಾಳಿಪಟದ ಯಾವುದೇ ಎಲಿಮೆಂಟ್‌ಗಳು ಇರೋದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಇದರಲ್ಲಿ ರಿಷಿಯನ್ನು ಇದೀಗ ಕೈ ಬಿಡಲಾಗಿದೆ. ಆದರೆ ಇದೀಗ ಭಟ್ಟರ ಗಾಳಿಪಟವನ್ನು ಹಾರಿಸೋಕೆ ಮತ್ತೆ ನಟ ಗಣೇಶ್ ಹಾಗೂ ದಿಗಂತ್ ಬರಲಿದ್ದಾರೆ. 

ಹೌದು, ಮುಂಗಾರು ಮಳೆ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಇದು ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ಗಣೇಶ್‌ ಅವರಿಗೆ ಚಂದನವನದಲ್ಲಿ ಗಟ್ಟಿಯಾದ ನೆಲೆ ಕಲ್ಪಿಸಿತ್ತು ಅನ್ನೋದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದರಲ್ಲಿ ಗೆದ್ದ ಬಳಿಕವೇ ಭಟ್ಟರು ಗಾಳಿಪಟ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಗಣೇಶ್‌, ದಿಗಂತ್‌ ಮತ್ತು ರಾಜೇಶ್‌ ಕೃಷ್ಣನ್ ಅವರು ನಟಿಸಿದ್ದರು. 


ಇದೀಗ ಗಾಳಿಪಟ ಬಿಡುಗಡೆ ಆಗಿ 11 ವರ್ಷಗಳೇ ಆಗಿವೆ. ಇದೀಗ ಮತ್ತೆ ಗಾಳಿಪಟ 2 ಚಿತ್ರ ನಿರ್ದೇಶಿಸಲು ಯೋಗರಾಜ್ ಭಟ್ ಅವರು ಮುಂದೆ ಬಂದಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಮೊದಲು ಭಟ್ಟರು, ಹಳೆಯ ಗಾಳಿಪಟದಲ್ಲಿದ್ದ ನಟ-ನಟಿಯರು ಇದರಲ್ಲಿ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈಗ ಹಳೆಯ ಸದಸ್ಯರೇ ಮತ್ತೆ ಭಟ್ಟರ ತಂಡಕ್ಕೆ ಸೇರ್ಪಡೆ ಆಗಿದ್ದಾರೆ ಎಂದು ತಿಳಿದು ಬಂದಿದೆ.


ಶರಣ್‌ ಮತ್ತು ರಿಷಿ ಅವರ ಆಯ್ಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಮಿಶ್ರ ಪ್ರತಿಕ್ರಿಯೆ ಬಂದಿತ್ತು. ಅದರಲ್ಲೂ ನೆಗೆಟಿವ್ ಒಪಿನಿಯನ್ ಗಳೇ ಹೆಚ್ಚಾಗಿ ಇದ್ದಿದ್ದರಿಂದ ಈ ಇಬ್ಬರನ್ನೂ ಕೈಬಿಡಲಾಗಿದೆ ಎನ್ನಲಾಗಿದೆ. ಅವರ ಸ್ಥಾನದಲ್ಲಿ ಗಣೇಶ್‌ ಮತ್ತು ದಿಗಂತ್‌ ಅಭಿನಯಿಸಲಿದ್ದಾರೆ. ಅಲ್ಲದೇ ಇದೀಗ ಪವನ್ ಕುಮಾರ್ ಅವರು ಕೂಡ ಇದರಲ್ಲಿ ಸೇರ್ಪಡೆ ಆಗಿದ್ದಾರೆ.


ಈ ಚಿತ್ರದ ಇನ್ನೊಂದು ವಿಶೇಷ ಏನೆಂದರೆ, ಗಾಳಿಪಟ 2 ರಲ್ಲಿ ನಾಲ್ವರು ನಾಯಕಿಯರು ಇರಲಿದ್ದಾರೆ. ಶರ್ಮಿಳಾ ಮಾಂಡ್ರೆ ಮತ್ತು ಸೋನಲ್‌ ಮಾಂತೆರೊ ಅವರಿಬ್ಬರು ನಟಿಸೋದು ಇದೀಗ ಪಕ್ಕಾ ಆಗಿದೆ. ಅಲ್ಲದೇ, ಚಿತ್ರಕ್ಕಾಗಿ ಚೀನಾದ ನಟಿಯೊಬ್ಬಳನ್ನು ಕರೆ ತರುವ ಯೋಜನೆ ಇದೆ. ಒಂದು ಪಾತ್ರ ಚೀನಾ ದೇಶದವಳಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.


Find out more: